ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಎದುರಾಳಿಗಳ ಕುರಿತು ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡಬಾರದು ಎಂಬುದು ಮಾದರಿ ಚುನಾವಣಾ ನೀತಿ ಸಂಹಿತೆಯ ಮೊದಲ ಪುಟದಲ್ಲೇ ಇರುವ ನಿಯಮ. ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ತಿಳಿಯದ ಸಂಗತಿಯೇನೂ ಅಲ್ಲ.
ಆದರೆ ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ಮೋದಿ, ರಾಹುಲ್ ಅವರನ್ನು ‘ಮಂಗಳ ಗ್ರಹದ ಮಹಾಶಯ’ ಎಂದು ಮೂದಲಿಸಿದರು. ಇದಕ್ಕೆ ಪ್ರತ್ಯುತ್ತರ ಎಂಬಂತೆ ರಾಹುಲ್ ಅವರು ಮೋದಿಯವರನ್ನು ‘ಹಿಟ್ಲರ್’ ಎಂದು ಜರಿದಿದ್ದಾರೆ.
‘ವಾಜಪೇಯಿ ಮುಂದೊಂದು ದಿನ ಈ ದೇಶವನ್ನು ಮುನ್ನಡೆಸುವ ನೇತಾರ ಆಗುತ್ತಾನೆ’ ಎಂದು ಕಾಂಗ್ರೆಸ್ಸಿಗರ ಬಳಿ ನೆಹರೂ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಅದೇ ರೀತಿ ವಾಜಪೇಯಿ ಅವರು ಕೇಂದ್ರ ಸಚಿವರಾದಾಗ ತಮ್ಮ ಕಚೇರಿಯಲ್ಲಿ ನೆಹರೂ ಭಾವಚಿತ್ರ ಇಟ್ಟುಕೊಂಡಿದ್ದರಂತೆ. ಮೋದಿ ಮತ್ತು ರಾಹುಲ್ ಅವರಿಗೆ ಈ ವಿಚಾರಗಳನ್ನು ಅವರ ಪಕ್ಷದ ಹಿರಿಯರು ತಿಳಿಸಬೇಕು.
ರಾಹುಲ್ ಅವರನ್ನು ‘ಮಂಗಳ ಗ್ರಹದ ಮಹಾಶಯ’ ಎಂದು ಹಾಸ್ಯ ಮಾಡುವ ಅಧಿಕಾರ ಮೋದಿಯವರಿಗೆ ಇಲ್ಲ. ಅದೇ ರೀತಿ ಮೋದಿ ಅವರನ್ನು ಹಿಟ್ಲರ್ ಜೊತೆ ಹೋಲಿಸುವ ಅಧಿಕಾರವೂ ರಾಹುಲ್ ಅವರಿಗಿಲ್ಲ. ರಾಹುಲ್ ಮತ್ತು ಮೋದಿ ಅವರಿಬ್ಬರೂ ಈ ದೇಶಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ಮಾತ್ರ ವಿವರಿಸಲಿ. ಅವರ ಉಪದೇಶ ಕೇಳುವಷ್ಟು ವ್ಯವಧಾನ ಭಾರತೀಯರಿಗೆ ಇಲ್ಲ.